ಇನ್ನಾದ್ರೂ ಈ ಫೋಟೋ ಶೇರ್ ನಿಲ್ಲಿಸಿ: ಫೋಟೋ ಹಿಂದಿನ ಸೀಕ್ರೆಟ್ ರಿವೀಲ್
ಪುನೀತ್ ರಾಜ್ಕುಮಾರ್ ಅವರು ನಿಧನರಾಗಿದ್ದು ಒಂದು ಭರಿಸಲಾಗದ ನಷ್ಟ. ಆದರೆ ನೋವಿನಲ್ಲೇ ಈ ವಾಸ್ತವ ಒಪ್ಪಲೇಬೇಕಾಗಿದೆ. ಪುನೀತ್ ಅವರ ನಿಧನಾನಂತರ ಅವರಿಗೆ ಸಂಬಂಧ ಪಟ್ಟ ಅನೇಕ ಫೋಟೋ ಗಳು, ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇವೆ. ಅದರಲ್ಲಿ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದೀಗ ಈ ಫೋಟೋದ ಹಿಂದಿನ ಅಸಲಿಯತ್ತು ಅಥವಾ ಸೀಕ್ರೆಟ್ ಹೊರ ಬಂದಿದ್ದು, ಫೋಟೋ ಶೇರ್ ಮಾಡುವ ಮುನ್ನ ಒಂದು ಸಲ ಯೋಚನೆ ಮಾಡುವಂತೆ ಜನರಿಗೆ ಇದೊಂದು ಸಂದೇಶವನ್ನು ನೀಡುತ್ತಿದೆ.
ಪುನೀತ್ ಅವರು ಪಾರ್ಕ್ ಒಂದರಲ್ಲಿ ವಾಕ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೊ ಶೇರ್ ಮಾಡಿಕೊಂಡವರು, ಪಾರ್ಕ್ ನಲ್ಲಿ ಅಪ್ಪು ಅವರು ವಾಕಿಂಗ್ ಮಾಡುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎಂದು ಬರೆದುಕೊಂಡಿದ್ದರು. ಇದನ್ನು ನಿಜ ಎಂದು ಕೊಂಡು ಬಹಳಷ್ಟು ಜನರು ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆಗಲೇ ಅವರು ವೈದ್ಯರ ಬಳಿ ಹೋಗಬೇಕಿತ್ತು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಫೋಟೋ ಅಪ್ಪು ಅವರು ವಾಕಿಂಗ್ ಮಾಡುವಾಗ ತೆಗೆದಿರುವುದು ಎನ್ನುವುದರಲ್ಲಿ ಯಾವುದೇ ಅನುಮಾನ ಖಂಡಿತ ಅಲ್ಲ. ಆದರೆ ಈ ಫೋಟೋ ಎರಡು ತಿಂಗಳಷ್ಟು ಹಳೆಯದು ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಪುನೀತ್ ರಾಜ್ಕುಮಾರ್ ಅವರು ಪಾರ್ಕ್ ನಲ್ಲಿ ವಾಕಿಂಗ್ ಮಾಡುವಾಗ ಸದಾಶಿವನಗರದ ಸ್ನೇಹ ಜೀವಿ ಗ್ರೂಪ್ ನ ಸದಸ್ಯರು ಈ ಫೋಟೋ ತೆಗೆದಿದ್ದರು ಎನ್ನಲಾಗಿದೆ. ವಾಕಿಂಗ್ ಮಾಡುತ್ತಿರುವ ಅಪ್ಪು ಅವರ ಮುಂದೆ ಇದ್ದ ವ್ಯಕ್ತಿ ಅಪ್ಪು ಅವರಿಗೆ ನಮಸ್ಕರಿಸಿದ್ದರು.
ಆ ವೇಳೆ ಪುನೀತ್ ಅವರು ಆ ವ್ಯಕ್ತಿಗೆ ಪ್ರತಿಯಾಗಿ ನಮಸ್ಕರಿಸುವ ವೇಳೆಯಲ್ಲಿ ಫೋಟೋವನ್ನು ಕ್ಲಿಕ್ಕಿಸಲಾಗಿತ್ತು ಎನ್ನಲಾಗಿದೆ. ಆ ವೇಳೆ ಅವರ ಕೈ ಎದೆಯ ಭಾಗದಲ್ಲಿ ಕಂಡಿದೆ. ಜನರು ಅದನ್ನೇ ತಮ್ಮದೇ ಆದ ರೀತಿಯಲ್ಲಿ ನೋಡಿ, ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಜನರು ಇದನ್ನು ನೋಡಿ ಅವರಿಗೆ ಬೆಳಿಗ್ಗೆಯೇ ಎದೆ ನೋವು ಕಾಣಿಸಿಕೊಂಡಿತ್ತು, ಆಗಲೇ ಆಸ್ಪತ್ರೆಗೆ ಹೋಗಿದ್ದರೆ ಇಂತಹ ಅವಘಡ ನಡೆಯುತ್ತಿರಲಿಲ್ಲ ಎಂದೆಲ್ಲ ಬರೆದುಕೊಂಡ ಫೋಟೋ ವೈರಲ್ ಆಗಿದೆ, ಇನ್ನೂ ಆಗುತ್ತಿದೆ.