ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಈಗಾಗಲೇ ದೊಡ್ಡ ಮಟ್ಟದ ಯಶಸ್ಸನ್ನು ಪಡೆದ ಸೀರಿಯಲ್ ಆಗಿದೆ. ಇದರಲ್ಲಿ ನಾಯಕ ಆರ್ಯವರ್ಧನ್ ಪಾತ್ರ ಬಹಳ ವಿಶೇಷವಾದದ್ದು, ಈ ಪಾತ್ರಕ್ಕೆ ಜೀವ ತುಂಬಿದವರು ನಟ ಅನಿರುದ್ಧ್. ಅದೆಷ್ಟೋ ಜನರು ಜೊತೆ ಜೊತೆಯಲಿ ಸೀರಿಯಲ್ ಅನ್ನು ನಟ ಅನಿರುದ್ಧ್ ಅವರ ಪಾತ್ರಕ್ಕಾಗಿಯೇ ನೋಡುತ್ತಿದ್ದರು ಎನ್ನುವುದು ಸುಳ್ಳಲ್ಲ. ನಟ ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರದ ಮೂಲಕ ನಾಡಿನ ಮನೆ ಮನೆ ಮಾತಾದರು. ಅವರನ್ನು ಜನರು ಸಹಾ ಆರ್ಯವರ್ಧನ್ ಎಂದೇ ಗುರುತಿಸುವಷ್ಟರ ಮಟ್ಟಿಗೆ ಆ ಪಾತ್ರವು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿತ್ತು. ಆ ಪಾತ್ರದಲ್ಲಿ ಬೇರೊಬ್ಬರನ್ನು ಊಹಿಸಿಕೊಳ್ಳಲು ಸಹಾ ಪ್ರೇಕ್ಷಕರು ಸಿದ್ಧರಿಲ್ಲ.
ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ನಟ ಅನಿರುದ್ಧ್ ಅವರು ಸೀರಿಯಲ್ ನ ತಮ್ಮ ಪಾತ್ರದಿಂದ ಹೊರ ಬಂದಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸೀರಿಯಲ್ ನಲ್ಲಿ ಸಹಾ ಆರ್ಯವರ್ಧನ್ ಪಾತ್ರಕ್ಕೆ ಬೇರೊಬ್ಬ ನಟನ ಆಗಮನವಾಗಿದೆ. ಇಷ್ಟು ದಿನ ಅನಿರುದ್ಧ್ ಅವರು ಇಲ್ಲದೇ ಹೋದರೂ ಅವರ ಕೆಲವೊಂದು ದೃಶ್ಯಗಳು, ಸನ್ನಿವೇಶಗಳು ಪ್ರಸಾರ ಕಾಣುತ್ತಿದ್ದವು. ಆದರೆ ಈಗ ಅವರು ನಟಿಸಿದ್ದ ದೃಶ್ಯಗಳು ಸಹಾ ಮುಗಿದಿವೆ. ಅಲ್ಲಿಗೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನಿರುದ್ಧ್ ಅವರ ಪಾತ್ರ ಸಂಪೂರ್ಣವಾಗಿ ಮುಗಿದಿದ್ದು, ಈ ವೇಳೆ ನಟ ಸಾಮಾಜಿಕ ಜಾಲತಾಣದಲ್ಲಿ ಒಂದು ಭಾವುಕ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಅವರು ಮಾಡಿದ ಪೋಸ್ಟ್ ನಲ್ಲಿ, ನನ್ನ ಮೇಲೆ ತಮಗಿರೋ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು ಸಾವಿರಾರು ಸಂದೇಶಗಳ, ಟ್ವೀಟ್, ಕರೆಗಳ, ಪತ್ರಗಳ, ಪ್ರತಿಭಟನೆಗಳ, ಪತ್ರಿಕಾಗೋಷ್ಠಿಗಳ, ಪ್ರಾರ್ಥನೆಗಳ ಮುಖಾಂತರ, ನನ್ನ ಪರ, ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಅದಕ್ಕೆ ನಾನು ಚಿರ ಋುಣಿ.
ತಮ್ಮ ಪ್ರಯತ್ನಗಳಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತ ದಯವಿಟ್ಟು ನಿರಾಶೆಗೊಳ್ಳಬೇಡಿ.
ಶ್ರೀ ಅಮಿತಾಭ್ ಬಚ್ಚನ್ ರವರ ತಂದೆ ಮಹಾನ್ ಕವಿ ಶ್ರೀ ಹರಿವಂಶ್ ರಾಯ್ ಬಚ್ಚನ್ ರವರು ಹೇಳುತ್ತಿದ್ದರು
“ಮನ್ ಕಾ ಹುವಾ ತೋ ಅಚ್ಛಾ, ನಾ ಹುವಾ ತೋ ಔರ್ ಭೀ ಅಚ್ಛಾ ಕ್ಯುಂಕೆ ತಬ್ ವೋ ಭಗವಾಗ್ ಕೀ ಇಚ್ಛಾ ಹೋತಿ ಹೈ ಔರ್ ಭಗವಾನ್ ತುಮ್ಹಾರೆ ಲಿಯೇ ಅಚ್ಛಾಹೀ ಸೋಚತಾ ಹೈ”
(ನಮ್ಮ ಇಚ್ಛಾನುಸಾರ ಆದರೆ ಒಳ್ಳೆದು, ಆಗದೇ ಇದ್ದರೆ ಇನ್ನೂ ಒಳ್ಳೇದು ಯಾಕಂದರೆ ಆಗ ಅದು ದೇವರ ಇಚ್ಛೆ ಆಗಿರುತ್ತೆ ಹಾಗೂ ದೇವರು ನಮಗಾಗಿ ಒಳ್ಳೇದೆ ಮಾಡುತ್ತಾನೆ) ಸ್ವಲ್ಪ ತಾಳ್ಮೆಯಿಂದ ಇರೋಣ, ತಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರತ್ತೆ ಅನ್ನೋ ನಂಬಿಕೆ ನನಗಿದೆ. ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ… ಯಾವಾಗಲೂ ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.