ಕಳೆದ ವರ್ಷ ಕೊರೋನಾ ಕಾರಣದಿಂದಾಗಿ ಅದೆಷ್ಟೋ ಸಮಾರಂಭಗಳು ನಡೆಯುವುದು ಸಾಧ್ಯವಾಗಲಿಲ್ಲ. ಪ್ರತಿ ವರ್ಷ ಅದ್ದೂರಿಯಾಗಿ ನಡೆಯುವಂತಹ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೂ ಸಹಾ ದೊಡ್ಡ ಬ್ರೇಕ್ ಬಿದ್ದಿತ್ತು. ಸಿನಿಮಾ ಸ್ಟಾರ್ ಗಳೆಲ್ಲಾ ಒಂದೆಡೆ ಸೇರಿ ಸಂಭ್ರಮಿಸುವ ಕ್ಷಣಗಳು ದೂರಾಗಿದ್ದವು. ಆದ್ದರಿಂದಲೇ ದಕ್ಷಿಣ ಭಾರತದ ಚಿತ್ರರಂಗದ ಪ್ರತಿಷ್ಠಿತ ಸೈಮಾ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಹಾ ನಡೆಸುವುದು ಸಾಧ್ಯವಾಗಿರಲಿಲ್ಲ. ಪ್ರತಿ ವರ್ಷ ವೈಭವಯುತ್ತವಾಗಿ ನಡೆಯುತ್ತಿದ್ದ ಸೈಮಾ ಕೊಂಚ ವಿರಾಮ ಪಡೆದುಕೊಂಡಂತಾಗಿತ್ತು.
ಇನ್ನು 2019ರ ಸೈಮಾ ಸಿನಿಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಿನ್ನೆ ಹೈದರಾಬಾದ್ ನಗರದಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿನ ಸಿನಿ ತಾರೆಯರು ಒಂದೆಡೆ ಸೇರಿ ಸಂಭ್ರಮ ಆಡಿದ್ದಾರೆ. ಅಲ್ಲದೇ ಅದರ ಜೊತೆಗೆ ಪ್ರಶಸ್ತಿಗಳನ್ನು ಪಡೆದುಕೊಂಡ ಕಲಾವಿದರು ತಮ್ಮ ಸಂತೋಷವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಪ್ರಶಸ್ತಿ ಪಡೆದವರ ನಟ ನಟಿಯರು ಹಾಗೂ ತಂತ್ರಜ್ಞರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸ್ಯಾಂಡಲ್ವಿಡ್ ನ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಅಮರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದರು. ಅಭಿಷೇಕ್ ಅವರಿಗೆ ಅಮರ್ ಸಿನಿಮಾದಲ್ಲಿ. ನಟನೆಗಾಗಿ ಅತ್ಯುತ್ತಮ ಹೊಸ ನಟ ಎನ್ನುವ ಪ್ರಶಸ್ತಿ ದೊರೆತಿದೆ. ಮೊದಲ ಸಿನಿಮಾದಲ್ಲಿಯೇ ಅಭಿಷೇಕ್ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಅವರ ತಾಯಿ ಸಂಸದೆ ಸುಮಲತ ಅವರು ಬಹಳ ಸಂತೋಷ ಪಟ್ಟಿದ್ದಾರೆ.
ಸಂಸದೆ ಸುಮಲತಾ ಅವರು ಟ್ವೀಟ್ ಒಂದನ್ನು ಮಾಡುವ ಮೂಲಕ ಮಗನ ಸಾಧನೆಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಲತಾ ಅವರು ತಮ್ಮ ಟ್ವೀಟ್ ನಲ್ಲಿ, ನೆನ್ನೆ ಹೈದರಾಬಾದ್ ನಲ್ಲಿ ನಡೆದ 2019 ಸೈಮಾ ಪ್ರಶಸ್ತಿ ‘ಅತ್ಯುತ್ತಮ ಚೊಚ್ಚಲ ಸಿನಿಮಾ ನಟನೆಗಾಗಿ (best debut award) ಅಭಿಷೇಕ್ ಪಡೆದಿರುವುದು ಸಂಭ್ರಮ ಮತ್ತು ಹೆಮ್ಮೆಯ ಕ್ಷಣ. ನಟಿ ರಾಧಿಕಾ ಶರತ್ ಕುಮಾರ್, ಮಗನ ಕುರಿತಾಗಿ ಆಡಿದ ಒಳ್ಳೆಯ ಮಾತಿಗೆ ಧನ್ಯವಾದಗಳು. ಈ ಕ್ಷಣಕ್ಕೆ ಅಂಬರೀಶ್ ಸಾಕ್ಷಿಯಾಗಿದ್ದರೆ ಖುಷಿ ಇಮ್ಮಡಿ ಆಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
ಸುಮಲತ ಅವರು ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಖುಷಿಯನ್ನು ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ. ಅವರು ಶೇರ್ ಮಾಡಿದ ಫೋಟೋಗಳಿಗೆ ಅಂಬರೀಶ್ ಅವರ ಅಭಿಮಾನಿಗಳು, ಸುಮಲತ ಅವರ ಅಭಿಮಾನಿಗಳು ಹಾಗೂ ಯುವ ನಾಯಕ ನಟ ಅಭಿಷೇಕ್ ಅವರ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಾ, ಅಭಿಷೇಕ್ ಅವರಿಗೆ ಶುಭ ಹಾರೈಸಿದ್ದಾರೆ.