ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಕೂಡಾ ಹೆಸರು ಮಾಡಿರುವ ನಟ ಚಂದನ್ ಕುಮಾರ್ ಅವರು ಕಿರುತೆರೆಯ ಮೂಲಕ ಹೆಚ್ಚು ಜನರ ಅಭಿಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಸ್ತುತ ಕೂಡಾ ಅವರು ಕನ್ನಡದ ಸೀರಿಯಲ್ ಒಂದರಲ್ಲಿ ಗಮನ ಸೆಳೆಯುತ್ತಿದ್ದಾರೆ. ಚಂದನ್ ಕುಮಾರ್ ಅವರು ಕನ್ನಡ ಕಿರುತೆರೆಯಲ್ಲಿ ಮಾತ್ರವೇ ತೆಲುಗಿನ ಕಿರುತೆರೆಯ ಮೂಲಕ ಅಲ್ಲಿನ ಜನರ ಅಭಿಮಾನವನ್ನು ಸಹಾ ಪಡೆದುಕೊಂಡು, ತೆಲುಗು ನಾಡಿನಲ್ಲಿ ಸಹಾ ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಸಾವಿತ್ರಮ್ಮಗಾರಿ ಅಬ್ಬಾಯಿ ಸೀರಿಯಲ್ ನಲ್ಲಿ ಚಂದನ್ ನಾಯಕನಾಗಿ ಕಾಣಿಸಿಕೊಂಡಿದ್ದರು.
ಇದೀಗ ಚಂದನ್ ಕುಮಾರ್ ಅವರು ಮರಳಿ ತೆಲುಗು ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಚಂದನ್ ಅವರ ಹೊಸ ಸೀರಿಯಲ್ ಶ್ರೀಮತಿ ಶ್ರೀನಿವಾಸ್ ಮೊದಲ ಲುಕ್ ಬಿಡುಗಡೆ ಆಗಿದೆ. ಈ ಸೀರಿಯಲ್ ನಲ್ಲಿ ಚಂದನ್ ಕುಮಾರ್ ಅವರದ್ದು ಕಾರ್ ಮೆಕಾನಿಕ್ ಪಾತ್ರ. ಚಂದನ್ ಅವರ ಫಸ್ಟ್ ಲುಕ್ ಬಹಳ ವಿಶೇಷವಾಗಿ ಕಂಡಿದ್ದು, ಕೆಲವೇ ದಿನಗಳ ಹಿಂದೆ ಚಂದನ್ ಕೂಡಾ ತಾವು ಹೊಸ ತೆಲುಗು ಸೀರಿಯಲ್ ಮಾಡುತ್ತಿರುವ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ಇನ್ನು ಚಂದನ್ ಅವರ ಈ ಹೊಸ ಸೀರಿಯಲ್ ಶ್ರೀಮತಿ ಶ್ರೀನಿವಾಸ್ ಹಿಂದಿಯ ಸೂಪರ್ ಹಿಟ್ ಸೀರಿಯಲ್ ಪವಿತ್ರ ರಿಶ್ತಾ ದ ರಿಮೇಕ್ ಆಗಿದೆ. ಹೌದು ಹಿಂದಿಯ ಈ ಸೀರಿಯಲ್ ಮೂಲಕ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕಿರುತೆರೆಯ ಲೋಕದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದವರು. ಸುಶಾಂತ್ ಈ ಸೀರಿಯಲ್ ಮೂಲಕ ಅಂದು ಮನೆ ಮನೆ ಮಾತಾಗಿದ್ದರು. ತಮ್ಮ ನಟನಾ ಕೆರಿಯರ್ ಸೀರಿಯಲ್ ಮೂಲಕ ಆರಂಭ ಮಾಡಿದ್ದ ಸುಶಾಂತ್ ಅನಂತರ ಬೆಳೆದ ರೀತಿ ಎಲ್ಲರಿಗೂ ತಿಳಿದೇ ಇದೆ.
ಈಗ ಇದೇ ಪವಿತ್ರ ರಿಶ್ತಾ ಸೀರಿಯಲ್ ಅನ್ನು ತೆಲುಗಿನಲ್ಲಿ ಶ್ರೀಮತಿ ಶ್ರೀನಿವಾಸ್ ಹೆಸರಿನಲ್ಲಿ ರಿಮೇಕ್ ಮಾಡಲಾಗಿದೆ. ಮತ್ತೊಂದು ವಿಶೇಷವೆಂದರೆ ತೆಲುಗಿನ ಈ ಸೀರಿಯಲ್ ನಲ್ಲಿ ಕನ್ನಡ ನಟ ಚಂದನ್ ಅವರ ಜೊತೆಗೆ ಕನ್ನಡದವರೇ ಆದ ನಟಿ ಅಂಕಿತಾ ಅಮರ್ ಅವರು ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ನಟ ಚಂದನ್ ಕುಮಾರ್ ಅವರು ಸಹಾ ಈ ಪಾತ್ರವನ್ನು ನಿರ್ವಹಣೆ ಮಾಡಲು ಬಹಳ ಉತ್ಸುಕರಾಗಿದ್ದು, ಮಾದ್ಯಮವೊಂದರ ಜೊತೆ ತಮ್ಮ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ.