ಸ್ಯಾಂಡಲ್ವುಡ್ ಮಾತ್ರವೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗದ ಗಮನ ಈಗ ವಿಕ್ರಾಂತ್ ರೋಣ ಸಿನಿಮಾದ ಕಡೆಗೆ ಹೊರಳಿದೆ. ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಚಿತ್ರ ತಂಡ ಸಿನಿಮಾ ಪ್ರಚಾರ ಕಾರ್ಯವನ್ನು ದೇಶದ ವಿವಿಧೆಡೆಗಳಲ್ಲಿ ಬಹಳ ಜೋರಾಗಿ ಮಾಡುತ್ತಿದ್ದು, ಕಿಚ್ಚ ಸುದೀಪ್ ಸೇರಿದಂತೆ ಅವರ ಇಡೀ ಚಿತ್ರ ತಂಡ ಈ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಲಿವುಡ್ ವಲಯದಲ್ಲಿ ಸಹಾ ದೊಡ್ಡ ಸದ್ದನ್ನು ಮಾಡುತ್ತಿವೆ. ಇದರಿಂದಾಗಿಯೇ ಸಹಜವಾಗಿಯೇ ವಿಕ್ರಾಂತ್ ರೋಣ ಸಹಾ ಈಗ ಕುತೂಹಲವನ್ನು ಕೆರಳಿಸಿದೆ. ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟು ಆಗಬಹುದು, ಸಿನಿಮಾ ಎಷ್ಟು ಸ್ಕ್ರೀನ್ ಗಳಲ್ಲಿ ತೆರೆಗೆ ಬರಲಿವೆ ಎಂದೆಲ್ಲಾ ಚರ್ಚೆಗಳು ನಡೆಯುವಾಗಲೇ ಸಿನಿಮಾದ ಕುರಿತಾಗಿ ಮೊಟ್ಟ ಮೊದಲ ರಿವ್ಯೂ ಹೊರ ಬಂದಿದೆ. ಈ ರಿವ್ಯೂ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಖುಷಿಗೊಂಡಿದ್ದಾರೆ.
ಭಾರತೀಯ ಸಿನಿಮಾಗಳು ವಿದೇಶಗಳಲ್ಲಿ ಬಿಡುಗಡೆ ಹೊಂದುವ ಮೊದಲು ಅಲ್ಲಿ ಸೆನ್ಸಾರ್ ಗೆ ಒಳ ಪಡುತ್ತವೆ. ಹೀಗೆ ಓವರ್ ಸೀಸ್ ಸೆನ್ಸಾರ್ ಆಗುವಾಗ ಭಾರತೀಯ ಸಿನಿಮಾಗಳನ್ನು ನೋಡಿ ಅವುಗಳ ರಿವ್ಯೂ ನೀಡುತ್ತಾರೆ ಸೆನ್ಸಾರ್ ಬೋರ್ಡ್ ನ ಸದಸ್ಯರಾಗಿರುವ ಉಮೈರ್ ಸಂದು ಅವರು. ಈ ಹಿಂದೆ ಅವರು ಪುಷ್ಪ, ತ್ರಿಬಲ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳ ರಿವ್ಯೂ ನೀಡಿದ್ದರು. ಅವರ ರಿವ್ಯೂ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡಿತ್ತು. ವಿಶೇಷ ಏನೆಂದರೆ ಆ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.
ಈಗ ಉಮೈರ್ ಸಂದು ಅವರು ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆಯನ್ನು ಮಾಡಿದ್ದು, ಮೊದಲ ವಿಮರ್ಶೆಯನ್ನು ಬರೆದುಕೊಂಡಿದ್ದಾರೆ. ಉಮೈರ್ ಸಂದು ಅವರು ಟ್ವೀಟ್ ಮಾಡಿದ್ದು ಅದರಲ್ಲಿ, “ಸೆನ್ಸಾರ್ ಮಂಡಳಿಯಿಂದ ಮೊದಲ ವಿಮರ್ಶೆ ವಿಕ್ರಾಂತ್ ರೋಣ ! ಒಟ್ಟಾರೆಯಾಗಿ ವಿಕ್ರಾಂತ್ ರೋನಾ [ಹಿಂದಿ] ಪೈಸಾ ವಸೂಲ್ ಎಂಟರ್ಟೈನರ್ ಆಗಿದ್ದು, ಅನುಪ್ ಭಂಡಾರಿ ಅವರ ದಕ್ಷ ನಿರ್ದೇಶನ, ಎಂಗೇಜಿಂಗ್ ಸ್ಟೋರಿ, ಉಸಿರುಗಟ್ಟಿಸುವ ಛಾಯಾಗ್ರಹಣ, ಆಕ್ಷನ್, ಥ್ರಿಲ್ಸ್ ಮತ್ತು ಸುದೀಪ್ ಅವರ ಸ್ಟಾರ್ ಗಿರಿ ಇದ್ದು, ಶ್ಯೂರ್ ಶಾಟ್ ಹಿಟ್” ಎಂದು ಹೇಳಿ , ನಾಲ್ಕು ಸ್ಟಾರ್ ನೀಡಿದ್ದಾರೆ.