ಸರ್ಜಾ ಕುಟುಂಬಕ್ಕೆ ಮತ್ತೊಂದು ಬರಸಿಡಿಲು: ಮಾತೃ ವಿಯೋಗದ ನೋವಿನಲ್ಲಿ ನಟ ಅರ್ಜುನ್ ಸರ್ಜಾ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದ ಜನಪ್ರಿಯ ಸ್ಟಾರ್ ನಟ ಅರ್ಜುನ್ ಸರ್ಜಾ ಅವರ ಕುಟುಂಬದಲ್ಲಿ ನಟ ಚಿರಂಜೀವಿ ಸರ್ಜಾ ಅಗಲಿಕೆಯು ಅವರ ಇಡೀ ಕುಟುಂಬಕ್ಕೆ ಒಂದು ದೊಡ್ಡ ನೋವನ್ನು ಉಳಿಸಿ ಹೋಗಿತ್ತು. ಚಿರಂಜೀವಿ ಸರ್ಜಾ ಅವರ ನಿಧನದ ನಂತರ ಆ ನೋವಿನಿಂದ ಹೊರ ಬರುವುದು ಅವರ ಇಡೀ ಕುಟುಂಬಕ್ಕೆ ಸುಲಭದ ಮಾತಾಗಿರಲಿಲ್ಲ. ಆದರೆ ಈಗ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನೋವು ಮಾಸುವ ಮೊದಲೇ ಸರ್ಜಾ ಕುಟುಂಬದಲ್ಲೀಗ ಮತ್ತೊಂದು ನೋವಿನ ಛಾಯೆ ಮೂಡಿದೆ. ನಟ ಅರ್ಜುನ್ ಅವರಿಗೆ ಮಾತೃ ವಿಯೋಗದ ಸಂಕಟ ಉಂಟಾಗಿದೆ.

ಹೌದು ಅರ್ಜುನ್ ಸರ್ಜಾ ಅವರ ತಾಯಿ, ಸ್ಯಾಂಡಲ್ವುಡ್ ಸ್ಟಾರ್ ನಟ ಧ್ರುವ ಸರ್ಜಾ ಅಜ್ಜಿ, ಹಿರಿಯ ನಟ ಶಕ್ತಿ ಪ್ರಸಾದ್ ಅವರ ಪತ್ನಿ ಲಕ್ಷ್ಮೀದೇವಿ ಅವರು ಇಹಲೋಕವನ್ನು ತ್ಯಜಿಸಿದ್ದಾರೆ. 84 ವರ್ಷ ವಯಸ್ಸಿನ ಲಕ್ಷ್ಮೀ ದೇವಿ ಅವರು ವಯೋ ಸಹಜವಾದ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅವರು ಕಳೆದ 22 ದಿನಗಳಿಂದ ಬೆಂಗಳೂರು ನಗರದ ಅಪೋಲೋ ಆಸ್ಪತ್ರೆಯಲ್ಲಿ ಐಸಿಯು ವಿಭಾಗದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀದೇವಿ ಅವರು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ ಎನ್ನಲಾಗಿದೆ.

ತಮ್ಮ ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನಲೆಯಲ್ಲಿ ನಟ ಅರ್ಜುನ್ ಸರ್ಜಾ ಅವರು ಬೆಂಗಳೂರಿನಲ್ಲೇ ಇದ್ದರೆನ್ನಲಾಗಿದೆ. ಇನ್ನು ನಟ ಧೃವ ಸರ್ಜಾ ಅವರು ಹೈದ್ರಾಬಾದ್ ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದವರು, ಅಜ್ಜಿಯ ನಿಧನ‌ ವಾರ್ತೆ ತಿಳಿದು ಅಲ್ಲಿಂದ ಹೊರಟಿದ್ದಾರೆ ಎನ್ನಲಾಗಿದೆ. ಹಿರಿಯ ನಟ ಶಕ್ತಿ ಪ್ರಸಾದ್ ಅವರನ್ನು ವಿವಾಹವಾಗಿದ್ದ ಲಕ್ಷ್ಮೀ ದೇವಿ ಅವರಿಗೆ ಅಮ್ಮಾಜಿ, ಅರ್ಜುನ್ ಸರ್ಜಾ ಮತ್ತು ಕಿಶೋರ್ ಸರ್ಜಾ ಮೂರು ಜನ ಮಕ್ಕಳು. ಅಮ್ಮಾಜಿ ಅವರು ಧೃವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರ ತಾಯಿಯಾಗಿದ್ದು, ಕಿಶೋರ್ ಸರ್ಜಾ 2009 ರಲ್ಲಿ ನಿಧನರಾಗಿದ್ದಾರೆ.

Leave a Comment