ಮಲೆಯಾಳಂ ಚಿತ್ರರಂಗದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಗೆ ಪ್ರತ್ಯೇಕ ಪರಿಚಯದ ಅಗತ್ಯ ಇಲ್ಲ. ಮಲೆಯಾಳಂ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ದಕ್ಷಿಣ ಸಿನಿ ರಂಗದಲ್ಲೂ ಸಹಾ ಈ ನಟನಿಗೆ ಅವರದ್ದೇ ಆದ ಹೆಸರಿದೆ. ಮಾಡುವ ವಿಶೇಷ ಪಾತ್ರಗಳ ಮೂಲಕ ಅಪಾರ ಅಭಿಮಾನಿಗಳ ಅಭಿಮಾನವನ್ನು ತನ್ನದಾಗಿಸಿಕೊಂಡಿದ್ದಾರೆ ದುಲ್ಕರ್ ಸಲ್ಮಾನ್. ವಿಭಿನ್ನವಾದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಈ ನಟ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಹಿಂದೇಟು ಹಾಕಿದವರಲ್ಲ. ಆದ್ದರಿಂದಲೇ ಅವರ ಸಿನಿಮಾಗಳು ಅಭಿಮಾನಿಗಳ ವಿಶೇಷ ಮನ್ನಣೆಯನ್ನು ಪಡೆದಿವೆ.
ದುಲ್ಕರ್ ಸಲ್ಮಾನ್ ಅವರು ಮಲೆಯಾಳಂ ಅಲ್ಲದೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತೆಲುಗಿನಲ್ಲಿ ಮಹಾನಟಿ ಸಾವಿತ್ರಿ ಅವರ ಬಯೋಪಿಕ್ ನಲ್ಲಿ ಜೆಮಿನಿ ಗಣೇಶನ್ ಪಾತ್ರದಲ್ಲಿ ಕಾಣಿಸಿಕೊಂಡ ದುಲ್ಕರ್ ಸಲ್ಮಾನ್ ಅವರ ಪಾತ್ರಕ್ಕೆ ವಿಶೇಷವಾದ ಮನ್ನಣೆ ಮತ್ತು ಜನ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗೆ ವೈವಿದ್ಯಮಯ ಪಾತ್ರಗಳನ್ನು ಮಾಡುತ್ತಾ ಬಂದಿರುವ ನಟನ ಹೊಸ ಸಿನಿಮಾ ಸೀತಾ ರಾಮಂ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ನಟ ದುಲ್ಕರ್ ಸಲ್ಮಾನ್ ಮಾಡಿರುವ ಘೋಷಣೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಸೀತಾ ರಾಮಂ ಸಿನಿಮಾ ಆಗಸ್ಟ್ ಐದಕ್ಕೆ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ದುಲ್ಕರ್ ಮತ್ತು ನಟಿ ಮೃಣಾಲ್ ಠಾಕೂರ್ ಜೋಡಿ ಅದ್ಭುತವಾಗಿ ನಟಿಸಿದೆ ಎನ್ನಲಾಗಿದ್ದು, ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಒಂದು ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಈ ವೇಳೆ ದುಲ್ಕರ್ ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ. ಅಲ್ಲದೇ ಇದೇ ವಿಷಯವನ್ನು ನಟ ತಮ್ಮ ಟ್ವಿಟರ್ ಖಾತೆಯಲ್ಲಿ ಸಹಾ ಬರೆದುಕೊಂಡಿದ್ದಾರೆ.
ದುಲ್ಕರ್ ತಾನು ಇನ್ಮುಂದೆ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ನಡೆಸುವುದಿಲ್ಲ. ಇದೇ ತನ್ನ ಕೊನೆಯ ರೊಮ್ಯಾಂಟಿಕ್ ಸಿನಿಮಾ ಎಂದಿದ್ದಾರೆ. ಎಲ್ಲರೂ ರೋಮ್ಯಾಂಟಿಕ್ ಹೀರೋ ಎಂದು ಗುರ್ತಿಸುತ್ತಿದ್ದ, ಅದರಿಂದ ಹೊರ ಬರಬೇಕಾಗಿದೆ. ವಿಭಿನ್ನ ಪಾತ್ರಗಳನ್ನು ಮಾಡಬೇಕಾಗಿದೆ ಎಂದಿರುವ ನಟ, ಸೀತಾ ರಾಮಂ ನಿರ್ದೇಶಕರು ಕಥೆಯನ್ನು ಹೇಳಿದಾಗ ಇಲ್ಲ ಎಂದು ಹೇಳಲು ಆಗಲಿಲ್ಲ. ಈ ಸಿನಿಮಾ ಕಥೆ ಅಷ್ಟು ಅದ್ಭುತವಾಗಿದೆ ಎಂದಿರುವ ನಟ ಮುಂದೆ ಪ್ರೇಮ ಕಥಾ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.