ಅದೃಷ್ಟ ಎನ್ನುವುದು ಯಾವಾಗ, ಯಾರಿಗೆ, ಹೇಗೆ ಒಲಿದು ಬರುತ್ತದೆ ಎನ್ನುವುದನ್ನು ಯಾರೂ ಸಹಾ ಊಹೆ ಮಾಡಲು ಸಾಧ್ಯವೇ ಇಲ್ಲ. ಆದರೆ ಅದೃಷ್ಟದ ಬಾಗಿಲು ತೆರೆದರೆ ಮಾತ್ರ ಬಡವನ ಬದುಕು ಬಂಗಾರವಾಗುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಇದೀಗ ಇಂತಹುದೇ ಒಂದು ಅದೃಷ್ಟವು ಕೇರಳದ ವ್ಯಕ್ತಿಯೊಬ್ಬರಿಗೆ ಒಲಿದು ಬಂದಿದೆ. ಅವರ ಜೀವನಕ್ಕೊಂದು ಹೊಸ ಉತ್ಸಾಹವನ್ನು ನೀಡುವುದರ ಜೊತೆಗೆ ಅವರ ಇಡೀ ಕುಟುಂಬಕ್ಕೆ ಈ ಅದೃಷ್ಟವು ವರವಾಗಿ ಪರಿಣಮಿಸಿದೆ. ಹಾಗಾದರೆ ಯಾರು ಆ ಅದೃಷ್ಟವಂತ? ಅವರಿಗೆ ಒಲಿದು ಬಂದ ಆ ಅದೃಷ್ಟವೇನು ಎಂದು ತಿಳಿಯುವ ಕುತೂಹಲ ನಿಮ್ಮಲ್ಲಿ ಮೂಡಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.
ಕೇರಳ ಸರ್ಕಾರ ಓಣಂ ಹಬ್ಬದ ಪ್ರಯುಕ್ತ ನಡೆಸುಲು ಲಕ್ಕಿ ಬಂಪರ್ ಲಾಟರಿ ಡ್ರಾ ನಲ್ಲಿ ಆಟೋ ಡ್ರೈವರ್ ಒಬ್ಬರಿಗೆ ಕೋಟಿ ಕೋಟಿ ಹಣ ಜಾಕ್ ಪಾಟ್ ಹೊಡೆದಿದೆ. ತಿರುವನಂತಪುರಂ ನ ಶ್ರೀವರಂ ನ ನಿವಾಸಿಯಾಗಿರುವ 30 ವರ್ಷದ ಅನೂಪ್ ಎನ್ನುವವರು ಬಹುಮಾನವನ್ನು ಪಡೆದ ಅದೃಷ್ಟಶಾಲಿಯಾಗಿದ್ದಾರೆ. ಲಕ್ಕಿ ಬಂಪರ್ ಡ್ರಾ ನಲ್ಲಿ ಇವರಿಗೆ ಬರೋಬ್ಬರಿ 25 ಕೋಟಿ ರೂ.ಗಳ ಲಾಟರಿ ಹೊಡೆದಿದೆ. ಇದರಲ್ಲಿ ತೆರಿಗೆ ಮತ್ತು ಕಮೀಷನ್ ಕಳೆದು ಅನೂಪ್ ಅವರ ಕೈಗೆ 15.75 ಕೋಟಿ ರೂ.ಗಳು ಸೇರಲಿದೆ ಎನ್ನಲಾಗಿದೆ. ಈ ಲಾಟರಿ ಟಿಕೆಟ್ ಮಾರಾಟ ಮಾಡಿದ ಭಗವತಿ ಏಜನ್ಸಿ ಅವರಿಗೆ 2.5. ಕೋಟಿ ರೂ. ಕಮೀಷನ್ ಸಿಗಲಿದೆ ಎನ್ನಲಾಗಿದೆ.
ಕೇರಳ ರಾಜ್ಯದ ಹಣಕಾಸು ಸಚಿವರಾದ ಕೆ ಎಲ್ ಬಾಲಗೋಪಾಲ್ ಭಾನುವಾರ ಲಕ್ಕಿ ಡ್ರಾ ಮೂಲಕ ವಿಜೇತರ ಹೆಸರನ್ನು ಘೋಷಣೆಯನ್ನು ಮಾಡಿದ್ದಾರೆ. ಪ್ರತಿ ಲಾಟರಿ ಟಿಕೆಟ್ ಗೆ 500 ರೂ ಎಂದು ದರವನ್ನು ನಿಗಧಿ ಪಡಿಸಲಾಗಿತ್ತು. ವಿಶೇಷವೆಂದರೆ ಈ ವರ್ಷ ದಾಖಲೆ ಪ್ರಮಾಣದಲ್ಲಿ 66.5 ಲಕ್ಷ ಲಾಟರಿ ಟಿಕೆಟ್ ಗಳು ಮಾರಾಟವಾಗಿದೆ ಎಂದು ತಿಳಿದು ಬಂದಿದೆ. ಈ ಬಾರಿ ಲಾಟರಿ ಆಟೋ ಚಾಲಕ ಅನೂಪ್ ಅವರ ಬದುಕಿಗೆ ಹೊಸ ದಿಕ್ಕು ನೀಡಿದೆ. ಸಾಲ ಮಾಡಿ ಕೆಲಸಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ನಿರ್ಧಾರವನ್ನು ಮಾಡಿದ್ದ ಅನೂಪ್ ಅವರಿಗೆ ಲಾಟರಿ ಬಹುಮಾನ ಈಗ ಅವರಿಗೆ ಹೊಸ ಉತ್ಸಾಹವನ್ನು ನೀಡಿದೆ.