ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಳ್ಳುವ ಬಹಳಷ್ಟು ಜನ ಕಲಾವಿದರಿಗೆ ಬೆಳ್ಳಿ ತೆರೆಯಿಂದ ಅವಕಾಶಗಳು ಅರಸಿ ಬರುತ್ತವೆ. ಆದರೆ ಹೀಗೆ ಬೆಳ್ಳಿ ತೆರೆಯಲ್ಲಿ ಅವಕಾಶ ಪಡೆದವರೆಲ್ಲರ ಅದೃಷ್ಟವು ಹೊಳೆದು ಅವರು ಸ್ಟಾರ್ ಗಳಾಗಿ ಬಿಡುವರು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲವರು ಸಿನಿಮಾಗಳಿಗೆ ಎಂಟ್ರಿ ನೀಡಿದ ವೇಗದಲ್ಲೇ ಮರಳಿ ಕಿರುತೆರೆಯ ಕಡೆಗೆ ಮುಖ ಮಾಡುವುದು ಸಹಾ ನಡೆಯುತ್ತದೆ. ಇನ್ನು ನಟಿಯರ ವಿಷಯಕ್ಕೆ ಬಂದರೆ ಕಿರುತೆರೆಯ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ನೀಡಿದ ನಟಿ ರಚಿತಾ ರಾಮ್ ಮತ್ತು ರಾಧಿಕಾ ಪಂಡಿತ್ ಸ್ಟಾರ್ ನಟಿಯರಾಗಿದ್ದಾರೆ.
ಇಂತಹುದೇ ಒಂದು ಹಿನ್ನೆಲೆಯಲ್ಲಿ ಅಂದರೆ ಕಿರುತೆರೆಯ ನಂಬರ್ ಒನ್ ಧಾರಾವಾಹಿಯ ನಾಯಕಿಯಾಗಿ ನಟಿಸುತ್ತಿರುವ ನಟಿ ಮೇಘಾ ಶೆಟ್ಟಿ ಅವರಿಗೂ ಸಹಾ ಸೀರಿಯಲ್ ನಲ್ಲಿ ನಟಿಸುವಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ದೊರೆಯಿತು. ಸಿನಿಮಾ , ಸೀರಿಯಲ್ ಎರಡನ್ನೂ ನಿಭಾಯಿಸಿಕೊಂಡು ಬಂದ ಮೇಘಾ ಶೆಟ್ಟಿ ಅವರು ಮೊದಲ ಸಿನಿಮಾ ಮುಗಿಸಿದ ಕೂಡಲೇ , ನಟ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ನಲ್ಲಿ ನಾಯಕಿಯಾಗಿ ಅವಕಾಶವನ್ನು ಪಡೆದುಕೊಂಡರು.
ಈಗ ಇದರ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾವನ್ನು ಮೇಘಾ ಶೆಟ್ಟಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಈ ವಿಷಯವು ಒಂದು ಮಾದ್ಯಮವೊಂದರಲ್ಲಿ ಸುದ್ದಿಯಾಗಿದೆ. ಚಿತ್ರದ ಟೈಟಲ್ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ. ಆದರೆ ಈ ಸಿನಿಮಾ ಬಹುಭಾಷಾ ಸಿನಿಮಾ ಆಗಲಿದೆ ಎನ್ನುವ ಸುದ್ದಿ ಕುತೂಹಲವನ್ನು ಕೆರಳಿಸಿದೆ. ಈ ಸಿನಿಮಾವನ್ನು ಆರು ಭಾಷೆಗಳಲ್ಲಿ ತೆರೆಗೆ ತರಲು ಆಲೋಚನೆ ಮಾಡಲಾಗುತ್ತಿದೆ ಎನ್ನಲಾಗಿದ್ದು ಅಂತಹ ಪ್ರಯತ್ನ ನಿಜವಾದರೆ ಮೇಘಾ ಶೆಟ್ಟಿ ಈ ಸಿನಿಮಾ ಮೂಲಕ ಬಹುಭಾಷಾ ನಟಿಯಾಗಲಿದ್ದಾರೆ.
ಇನ್ನು ಇಂತಹ ಬಿಗ್ ಬಜೆಟ್ ಸಿನಿಮಾಕ್ಕೆ ಅವಕಾಶ ದೊರೆತ ಹಿನ್ನಲೆಯಲ್ಲಿ ನಟಿ ಮೇಘಾ ಶೆಟ್ಟಿ ಅವರು ಸಹಾ ಸಿನಿಮಾ ಬಗ್ಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಜಿಲ್ಕಾ ಸಿನಿಮಾದಲ್ಲಿ ನಟಿಸಿದ್ದ ಕವೀಶ್ ಈ ಸಿನಿಮಾದಲ್ಲಿ ಮೇಘಾ ಶೆಟ್ಟಿ ಜೊತೆ ನಟಿಸಲಿದ್ದು, ರಾಘವೇಂದ್ರ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದು ಬಂದಿದ್ದು, ದೀಪಾವಳಿ ವೇಳೆಗೆ ಸಿನಿಮಾದ ಟೈಟಲ್ ಬಿಡುಗಡೆ ಮಾಡಲಾಗುವುದೆಂದು ಸುದ್ದಿಯಾಗಿದೆ. ಮೇಘಾ ಶೆಟ್ಟಿ ಅವರ ಸಿನಿ ಪ್ರಯಾಣದಲ್ಲಿ ಹೊಸ ಹೊಸ ಅವಕಾಶಗಳು ಅವರನ್ನು ಅರಸಿ ಬರುತ್ತಿರುವುದು ಒಂದು ಉತ್ತಮ ಬೆಳವಣಿಗೆ ಎನಿಸಿದೆ.